Monday, 16 December 2019

ಬೋಧಿಸತ್ವ ಋರು ನೀಡಿದ ಅಭಯದಾನ

ಬೋಧಿಸತ್ವ ಋರು ನೀಡಿದ ಅಭಯದಾನ

ಬಹುಕಾಲದ ಹಿಂದೆ ಬೋಧಿಸತ್ವರು ಋರು ಎಂಬ ಜಿಂಕೆಯಾಗಿ ಹುಟ್ಟಿದರು. ಅವರ ಹಿಂದಿನ ಜನ್ಮದ ಪುಣ್ಯದಿಂದಾಗಿ, ಅವರ ಚರ್ಮವು ಚಿನ್ನದ ಬಣ್ಣವನ್ನು ಹೊಂದಿದ್ದು, ಬೇರೆ ಜಿಂಕೆಗಳಿಗಿಂತ ಅತ್ಯಂತ ಸುಂದರಾಕೃತಿಯನ್ನು ಹೊಂದಿತ್ತು. ಹಿಂದಿನ ಜನ್ಮದ ಸತ್ಯಾಚರಣೆಯಿಂದಾಗಿ, ಅದು ಮಾನವರಂತೆ ಮಾತನಾಡುತ್ತಿತ್ತು. ತನ್ನ ಸೌಂದರ್ಯದಿಂದಲೇ ತನಗೆ ಹಾನಿಯಾಗುವುದೆಂದು ಅದು ಶಾಲ ಮತ್ತು ಮಾವಿನ ತೋಪುಗಳಿಂದ ಕೂಡಿದ ಏಕಾಂತ ಸ್ಥಳದಲ್ಲಿ ಏಕಾಂಗಿಯಾಗಿ ವಾಸವಾಗಿತ್ತು.
ಒಂದುದಿನ ಅದು ಗಂಗೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಂತಹ ಮಾನವನನ್ನು ತನ್ನ ಅಸೀಮ ಶಕ್ತಿಯಿಂದ ಕಾಪಾಡಿತು. ಆ ಮಾನವನಿಗೆ ಹಣ್ಣು ಹಂಪಲುಗಳನ್ನು ನೀಡಿ ಸತ್ಕರಿಸಿತು. ನಂತರ ಆತನೊಂದಿಗೆ ಹೀಗೆ ಹೇಳಿತು: ಓ ಮನುಷ್ಯನೇ, ನಿನಗೆ ವಾರಾಣಸಿಯ ದಾರಿಯವರೆಗೆ ಬಿಡುತ್ತೇನೆ, ನೀನು ಸುಖಿಯಾಗಿ ಹೋಗು. ಆದರೆ ದುರಾಸೆಗೆ ವಶವಾಗಿ ಸ್ವರ್ಣಮೃಗವಾದ ನಾನು ವಾಸಿಸುವ ಸ್ಥಳದ ಬಗ್ಗೆ ಹೇಳಬೇಡ ಎಂದು ವಚನ ಸ್ವೀಕರಿಸಿ ಕಳುಹಿಸಿಕೊಟ್ಟಿತು.
ಆದರೆ ಮಾರನೆಯದಿನ ವಾರಾಣಸಿಯ ಪಟ್ಟಮಹಿಷಿಯ ಸ್ವಪ್ನದಲ್ಲಿ ಸ್ವರ್ಣ ಜಿಂಕೆಯೊಂದು ಆಕೆಗೆ ಧಮ್ಮೋಪದೇಶ ನೀಡಿದಂತೆ ಕಂಡಳು. ಇದರಿಂದ ಉತ್ತೇಜಿತಳಾದ ಆಕೆಯು ಅಂತಹ ಜಿಂಕೆಯನ್ನು ನಾನು ಕಾಣದಿದ್ದರೆ ನಾನು ಬದುಕಲಾರೆ ಎಂದು ಹಠಹಿಡಿದಳು. ಆಕೆಗಾಗಿ ರಾಜನು ಯಾರು ಸ್ವರ್ಣ ಜಿಂಕೆಯ ಸುಳಿವನ್ನು ನೀಡುವರೋ ಅವರಿಗೆ ಸಾವಿರ ಚಿನ್ನದ ನಾಣ್ಯ, ಗ್ರಾಮ ಮತ್ತು ಸುಂದರ ನಾರಿಯನ್ನು ನೀಡುತ್ತೇನೆ ಎಂದು ಡಂಗೂರ ಸಾರಿದನು.
ಯಾವ ಮನುಷ್ಯನನ್ನು ಋರು ಸ್ವರ್ಣ ಮೃಗವು ಕಾಪಾಡಿತ್ತೋ ಆ ಕೃತಘ್ನ ಪುರುಷನು ಬಹುಮಾನದ ಆಸೆಯಿಂದ ಆ ಸ್ಥಳದ ಮಾಹಿತಿಯೆಲ್ಲಾ ರಾಜನಿಗೆ ನೀಡಿದನು.
ರಾಜನು ಆ ಸ್ಥಳಕ್ಕೆ ಬಂದು ಋರುವಿಗೆ ಬಾಣದಿಂದ ಗುರಿಯಿಟ್ಟನು. ತಕ್ಷಣವೇ ಋರು ಬೋಧಿಸತ್ವರು ಹೀಗೆಂದರು: ತಡೆ ರಾಜ, ಆತುರಬೇಡ, ನಾನು ಓಡಿಹೋಗುವುದಿಲ್ಲ. ಮೊದಲು ನನ್ನ ಪ್ರಶ್ನೆಗೆ ಉತ್ತರಿಸು, ನಾನು ಇಲ್ಲಿರುವುದು ಹೇಗೆ ತಿಳಿಯಿತು.
ರಾಜನಿಗೆ ಅದು ಮಾತನಾಡಿದ್ದು ಕಂಡು ಆಶ್ಚರ್ಯವಾಯಿತು. ಆತನ ಆ ಕೃತಘ್ನ ಪುರುಷನನ್ನು ತೋರಿಸಿದನು. ಸ್ವರ್ಣ ಮೃಗವು ಹೀಗೆ ನುಡಿಯಿತು: ಮುಳುಗುತ್ತಿರುವ ಮನುಷ್ಯನನ್ನು ಕಾಪಾಡುವ ಬದಲು, ಮುಳುಗುತ್ತಿರುವ ಮರದ ದಿಮ್ಮಿಯನ್ನು ಕಾಪಾಡುವುದು ಉತ್ತಮವೆಂದು ಜ್ಞಾನಿಗಳು ಹೇಳುವುದು ಸತ್ಯವೇ ಆಗಿದೆ ಎಂದಿತು.
ಅರ್ಥವಾಗದ ರಾಜನಿಗೆ ನಂತರ ವಿವರವಾಗಿ ತಾನು ಹೇಗೆ ಪ್ರವಾಹದಲ್ಲಿ ಸಿಲುಕಿದ್ದ ಆತನನ್ನು ಕಾಪಾಡಿದೆನು ಎಂದೆಲ್ಲಾ ತಿಳಿಸಿತು. ರಾಜನಿಗೆ ಕೋಪವುಂಟಾಗಿ ಆ ಕೃತಘ್ನನನ್ನು ಕೊಲ್ಲಲು ನಿರ್ಧರಿಸಿದನು. ಆದರೆ ಬೋಧಿಸತ್ವ ಋರು ಅದಕ್ಕೆ ತಡೆದು ಕ್ಷಮೆ ನೀಡುವಂತೆ  ಕೇಳಿಕೊಂಡು ಆ ಕೃತಘ್ನನಿಗೆ ಬಹುಮಾನವು ಸಿಗುವಂತೆ ಮಾಡಿತು.
ನಂತರ ರಾಣಿಯ ಸ್ವಪ್ನದಂತೆ ಆಕೆಗೆ ಧಮ್ಮೋಪದೇಶವನ್ನು ಮಾಡಿತು. ಬೋಧಿಸತ್ವ ಋರುವಿನ ಉಪದೇಶದಂತೆ ಅಂದಿನಿಂದ ರಾಜ್ಯದಲ್ಲೆಲ್ಲಾ ಯಾರು ಪಶು-ಪಕ್ಷಿಗಳಿಗೆ ಪ್ರಾಣ ತೆಗೆಯುವುದು ಮತ್ತು ಹಿಂಸೆ ಮಾಡುವುದನ್ನು ತ್ಯಜಿಸಿದರು. 

No comments:

Post a Comment

ಸಸ ಬೋಧಿಸತ್ವರ ಮಹತ್ತರ ದಾನ

ಸಸ ಬೋಧಿಸತ್ವರ ಮಹತ್ತರ ದಾನ ಬೋಧಿಸತ್ವರು ತಮ್ಮ ದಾನಗುಣವನ್ನು ಸರ್ವಜನ್ಮಗಳಲ್ಲಿಯೂ ಪಾಲಿಸಿದರು. ಅವರು ಪ್ರಾಣಿಯಾಗಿರುವಾಗಲೂ ಸಹಾ ಇದನ್ನು ಬಿಡಲಿಲ್ಲ, ಪಾಲಿಸಿದರು....