ನರಭಕ್ಷಕನನ್ನು ಪರಿವರ್ತನೆಗೊಳಿಸಿದ ಬೋಧಿಸತ್ವ ಅಲೀನ ಶತ್ರುಕುಮಾರ
ಒಂದುದಿನ ಜಯದ್ದಿಸ ಮಹಾರಾಜರು ಬೇಟೆಗೆಂದು ಹೊರಟಿದ್ದರು. ಅಲ್ಲಿ ಬಣ್ಣದ ಮೃಗವನ್ನು ಬೇಟೆಯಾಡಿ ಹಿಂತಿರುಗುವಾಗ ಮರದ ಆಶ್ರಯ ಪಡೆದರು. ಅಲ್ಲಿ ನರಭಕ್ಷಕನೊಬ್ಬ ಇದ್ದನು. ಆತನು ಬಲಶಾಲಿಯು, ವಿಕೃತನು, ಭಯಾನಕವಾಗಿ ಕಾಣುತ್ತಿದ್ದನು. ಆತನು ರಾಜನನ್ನು ತಿನ್ನಲು ಹಿಡಿದುಬಿಟ್ಟನು. ಆತನನ್ನು ಕಂಡೊಡನೆ ಭೀತಿಗೊಂಡ ರಾಜನು ನಿಶ್ಶಕ್ತನಾದನು. ಆದರೂ ಧೈರ್ಯ ತೆಗೆದುಕೊಂಡು, ತಾನು ಬೇಟೆಯಾಡಿದ ಮೃಗ ಆ ನರಭಕ್ಷಕನಿಗೆ ಒಪ್ಪಿಸಿ, ಖಂಡಿತ ಹಿಂತಿರುಗಿ ಬರುವೆ ಎಂದು ವಚನ ನೀಡಿ ರಾಜ್ಯಕ್ಕೆ ಹಿಂತಿರುಗಿದನು.
ನಂತರ ಅಲೀನ ಶತ್ರುಕುಮಾರನಿಗೆ (ಬೋಧಿಸತ್ವನಿಗೆ) ರಾಜನನ್ನಾಗಿ ಮಾಡಲು ನಿರ್ಧರಿಸಿದನು. ಅದಕ್ಕಾಗಿ ಸಿದ್ಧತೆ ನಡೆಸಿದನು. ಆದರೆ ಬೋಧಿಸತ್ವ ಇದಕ್ಕೆಲ್ಲಾ ಕಾರಣ ತಿಳಿದುಕೊಂಡರು. ಹಾಗು ತಾವೇ ಆ ನರಭಕ್ಷಕನ ಬಳಿಗೆ ಹೋಗಲು ನಿರ್ಧರಿಸಿದರು. ತಂದೆ-ತಾಯಿಯು ವಿರೋಧಿಸಿದರು. ಆದರೂ ಅವರಿಗೆಲ್ಲಾ ಸಾಂತ್ವನ ಮಾಡಿ, ಧೈರ್ಯತುಂಬಿ ಅವರಿಂದ ಅಪ್ಪಣೆ ಪಡೆದು ಆ ನರಭಕ್ಷಕನ ಬಳಿಗೆ ಬರುತ್ತಾರೆ. ಅಲ್ಲಿಯ ನರಭಕ್ಷಕನನ್ನು ಕಂಡರೂ ಹೆದರದೆ ನನ್ನ ತಂದೆಯ ಬದಲು ನನ್ನನ್ನೇ ತಿಂದುಬಿಡು ಎಂದರು.
ಬೋಧಿಸತ್ವರ ಧೈರ್ಯ ಮತ್ತು ಸ್ವಭಾವ ಕಂಡು ಆ ನರಭಕ್ಷಕನಿಗೆ ಆಶ್ಚರ್ಯವಾಯಿತು. ಏಕೆಂದರೆ ಜೀವನದಲ್ಲಿ ಪ್ರಥಮಬಾರಿ ಆತನನ್ನು ಕಂಡು ಹೆದರದೆ ಮಾತನಾಡಿಸುವವರನ್ನು ಕಂಡನು. ಹಾಗೆಯೇ ತಂದೆಗಾಗಿ ಪ್ರಾಣ ನೀಡಲು ಸಂತೋಷವಾಗಿ ಮುಂದೆ ಬಂದಿರುವುದನ್ನು ಕಂಡು ಆಶ್ಚರ್ಯಪಟ್ಟನು. ಸಂತೋಷವಾಗಿ ತಿನ್ನು ಎಂದು ಹೇಳುವಾಗ ಆತನ ದಾನ ಸ್ವಭಾವ ಕಂಡು, ನರಭಕ್ಷಕನ ಮನಸ್ಸು ಪರಿವರ್ತನೆ ಹೊಂದಿತು. ಆತನು ಆ ಬಾಲಕನಿಗೆ ಹಾಗೇ ಕಳುಹಿಸಿಕೊಡಲು ನಿರ್ಧರಿಸಿ, ಅದರಂತೆ ಋಣಮುಕ್ತನಾಗಿರುವೆ ನಿನ್ನನ್ನು ತಿನ್ನಲಾರೆ ನೀನು ಹೊರಡು ಎಂದನು.
ಆಗ ಅಲೀನ ಶತ್ರುಕುಮಾರನು ನರಭಕ್ಷಕನನ್ನು ಸೂಕ್ಷ್ಮವಾಗಿ ವಿಶ್ಲೇಷಣೆಯಿಂದ ಗಮನಿಸಿ ಹೀಗೆ ಹೇಳುತ್ತಾರೆ: ನೀನು ಯಕ್ಷನಲ್ಲ, ಸ್ವತಃ ನನ್ನ ದೊಡ್ಡಪ್ಪನಾಗಿರುವೆ. ಏಕೆಂದರೆ ನಿನಗೂ ನನ್ನ ತಂದೆಗೂ ಮುಖ ಲಕ್ಷಣದಲ್ಲಿ ಹೋಲಿಕೆಯಿದೆ ಮತ್ತು ನೀನು ಚಿಕ್ಕವನಿರುವಾಗ ಯಕ್ಷಿಣಿಯೊಬ್ಬಳು ತಿನ್ನಲೆಂದು ನಿನ್ನನ್ನು ಎತ್ತಿಕೊಂಡು ಹೋಗಿದ್ದಳು. ಪುನಃ ಅವಳೇ ನಿನ್ನನ್ನು ವಾತ್ಸಲ್ಯದಿಂದ ಹಾಗೆ ಮಾಡದೆ, ನಿನ್ನನ್ನು ಕಾಪಾಡಿ ಬೆಳೆಸಿದ್ದಾಳೆ. ನನ್ನ ಜೊತೆ ರಾಜ್ಯಕ್ಕೆ ಬಾ, ನಿನ್ನನ್ನು ರಾಜನನ್ನಾಗಿಸುವೆ ಎಂದರು. ಆದರೆ ನರಭಕ್ಷಕನು ಇದನ್ನು ನಂಬಲಿಲ್ಲ. ಆದರೆ ಹತ್ತಿರದಲ್ಲೇ ವಾಸವಾಗಿದ್ದ ದಿವ್ಯಚಕ್ಷು ಸಾಧಿಸಿದ ಋಷಿಯ ಬಳಿಗೆ ಬಂದು ಈ ಬಗ್ಗೆ ವಿಚಾರಿಸಿದಾಗ ಅಲೀನಕುಮಾರ ಹೇಳಿದ್ದು ಅಕ್ಷರಶಃ ನಿಜವೆಂದು ಆ ಋಷಿಯು ಆ ಇಬ್ಬರಿಗೆ ಮಾತ್ರ ತಿಳಿದಂತಹ ಸಂಗತಿಗಳನ್ನು ಹೇಳಿ ಅವರಲ್ಲಿ ನಂಬಿಕೆ ತರಿಸಿ ಒಪ್ಪಿಸಿದರು. ಈಗ ಪುನಃ ಅಲೀನಕುಮಾರರು ನರಭಕ್ಷಕನಿಗೆ ರಾಜ್ಯಕ್ಕೆ ಮರಳಿ ಬರುವಂತೆ ಕೇಳಿಕೊಂಡರು. ಆದರೆ ಅದಕ್ಕೆ ಆತನು ಒಪ್ಪದೆ, ಋಷಿಯ ಬಳಿ ಪ್ರವಜ್ಯ ಸ್ವೀಕರಿಸಿ, ಶೀಲವಂತಿಕೆ ಜೀವನ ನಡೆಸಿದನು. ಅಲೀನಕುಮಾರರು ರಾಜ್ಯಕ್ಕೆ ಮರಳಿ ವಿಷಯವನ್ನು ತಿಳಿಸಿದರು.

No comments:
Post a Comment