Monday, 16 December 2019

ಛದ್ದಂತ ಬೋಧಿಸತ್ವರ ಅಂಗದಾನ

ಛದ್ದಂತ ಬೋಧಿಸತ್ವರ ಅಂಗದಾನ

ಬಹುಕಾಲದ ಹಿಂದೆ ಹಿಮಾಲಯ ಪ್ರಾಂತ್ಯದಲ್ಲಿರುವ ಸರೋವರದ ಬಳಿ ಎಂಬತ್ತು ಸಾವಿರ ಆನೆಗಳು ವಾಸವಾಗಿದ್ದವು. ಆ ಆನೆಗಳಿಗೆ ನಾಯಕರಾಗಿದ್ದವರೇ ಛದ್ದಂತ ಬೋಧಿಸತ್ವರು. ಈ ಛದ್ದಂತ ಆನೆಗೆ ತನ್ನ ಪೂರ್ವ ಜನ್ಮದ ಫಲದಿಂದಾಗಿ ಸುಂದರವಾದ ದಂತಗಳಿದ್ದು ಅದರಿಂದಾಗಿ ಸದಾ ಆರು ಬಣ್ಣದ ಪ್ರಬೆಯು ಹೊರಹೊಮ್ಮುತ್ತಿತ್ತು. ಈ ಕಾರಣದಿಂದಾಗಿ ಅದಕ್ಕೆ ಛದ್ದಂತ (ಆರು ವರ್ಣಗಳ ದಂತ) ಎನ್ನಲಾಗುತ್ತಿತ್ತು. ಈ ಆನೆಯ ದಾನಶೀಲಾದಿ ಸದ್ಗುಣಗಳಿಂದ ಕೂಡಿತ್ತು. ಹಿಮಾಲಯದಲ್ಲೇ ವಾಸವಾಗಿದ್ದ ಪಚ್ಚೇಕ ಬುದ್ಧರ ಸೇವೆಯನ್ನು ಮಾಡುತ್ತಿತ್ತು.
ಒಂದುದಿನ ಎಂದಿನಂತೆ ಆನೆಯು ಕಾಡಿನಲ್ಲಿ ಹೊರಟಿರಬೇಕಾದರೆ ಆ ಆನೆಗೆ ಹೊಂಚುಹಾಕುತ್ತಿದ್ದ ಕಾಷಾಯ ವಸ್ತ್ರದ ಬೇಟೆಗಾರನು ಅತ್ಯಂತ ಉಪಾಯದಿಂದಾಗಿ ಪ್ರಬಲವಾದ ಬಾಣದಿಂದಾಗಿ ಆನೆಗೆ ಗುರಿಯಿಟ್ಟು ಬಿಟ್ಟನು. ಹೀಗೆ ಬಾಣದಿಂದ ಸೀಳಲ್ಪಟ್ಟ ಆನೆಯು ನೋವಿನಿಂದ ಜೋರಾದ ಶಬ್ದದಿಂದ ನರಳಿತು. ಆ ಶಬ್ದಕ್ಕೆ ಹೆದರಿ ಉಳಿದ ಆನೆಗಳೆಲ್ಲಾ ಚೆಲ್ಲಾಪಿಲ್ಲಿಯಾದವು. ಗಾಯಗೊಂಡ ಆನೆಗೆ ಕೋಪವುಂಟಾಗಿ ಬಾಣ ಬಿಟ್ಟಂತಹ ವ್ಯಕ್ತಿಯತ್ತ ನುಗ್ಗಿತು. ಆದರೆ ಆತನು ಧರಿಸಿದ ಕಾಷಾಯ ವಸ್ತ್ರವನ್ನು ನೋಡಿ ಓಹ್ ಇದು ಪವಿತ್ರ ವ್ಯಕ್ತಿಗಳು ಧರಿಸುವಂತಹ ವಸ್ತ್ರಗಳಾಗಿವೆ. ಇದನ್ನು ಧರಿಸಿರುವಂತಹವರನ್ನು ಕೊಲ್ಲುವುದು ಸರಿಯಲ್ಲ. ಸಂಯಮ ಸತ್ಯ ಮತ್ತು ಅಹಿಂಸೆಯಿಲ್ಲದವರು ಈ ಕಾಷಾಯ ವಸ್ತ್ರ ಧರಿಸಿಯು ಅದಕ್ಕೆ ಯೋಗ್ಯರಾಗಿರುವುದಿಲ್ಲ. ಆದರೂ ಈ ವಸ್ತ್ರಕ್ಕೆ ಗೌರವಕ್ಕಾದರೂ ನಾನು ಹಿಂಸಿಸಬಾರದು ಎಂದು ನಿರ್ಧರಿಸಿತು. ಮತ್ತು ಹಿಂದಿನ ಜನ್ಮ ಸತ್ಯ ಪಾಲನೆಯಿಂದಾಗಿ ಅದಕ್ಕೆ ಮಾನವ ಭಾಷೆಯಲ್ಲಿ ಮಾತನಾಡುವ ಸಾಮಥ್ರ್ಯವಿತ್ತು. ಅದು ಬೇಟೆಗಾರನಿಗೆ ತನ್ನನ್ನು ಏಕೆ ಕೊಲ್ಲಲು ಬಂದಿದ್ದೀಯೆ ಎಂದು ವಿಚಾರಿಸಿತು. ಅದಕ್ಕೆ ಆ ಬೇಟೆಗಾರನು ಓ ಮಹಾ ಆನೆಯೇ, ಕಾಶಿ ರಾಜ್ಯದ ರಾಣಿಯಾದ ಸುಭದ್ರೆಗೆ ನಿನ್ನ ದಂತಗಳು ಬೇಕೆಂದು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾಳೆ ಎಂದನು.
ಆಗ ಬೋಧಿಸತ್ವರಿಗೆ ಎಲ್ಲವೂ ಕ್ಷಣಮಾತ್ರದಲ್ಲಿ ಅರ್ಥವಾಯಿತು. ಆ ಕಾಶಿ ರಾಣಿಯು  ತಾನು ಹುಟ್ಟುವ ಮುನ್ನ ಇದೇ ಛದ್ದಂತ ಆನೆಗೆ ಎರಡನೆಯ ಪತ್ನಿಯಾಗಿತ್ತು. ಛದ್ದಂತರು ಎರಡು ಹೆಣ್ಣು ಆನೆಗಳಿಗೂ ಸಮಾನವಾಗಿ ನೋಡಿಕೊಂಡರೂ ಸಹಾ ವಿನಾಕಾರಣ ಸಂಶಯದಿಂದಾಗಿ ಕಿರಿಯ ಪತ್ನಿಯು ಸವತಿ ಮಾತ್ಸರ್ಯದಿಂದಾಗಿ ಛದ್ದಂತವನ್ನು ದ್ವೇಷಿಸಿ, ಸತ್ತು ಪುನರ್ಜನ್ಮ ತಾಳಿ ಸೇಡು ತೀರಿಸುವಷ್ಟು ಕೋಪವುಂಟಾಗಿ, ಪಚ್ಚೇಕ ಬುದ್ಧರಿಗೆ ಹಣ್ಣು ಹಂಪಲುಗಳನ್ನು ನೀಡುವಾಗ ಬೋಧಿಸತ್ವರು ಬುದ್ಧತ್ವವನ್ನು ಅಶಿಸಿದರೆ, ಆ ಹೆಣ್ಣು ಆನೆಯು ಸತ್ತು ಸೇಡುತೀರಿಸಿಕೊಳ್ಳಲು ಕಾಶಿ ರಾಣಿಯಾಗಿ ಹುಟ್ಟಬೇಕು ಎಂದು ಸಂಕಲ್ಪಿಸಿದಳು ಮತ್ತು ಆಗ ಈ ಜನ್ಮದ ನೆನಪಿರಬೇಕೆಂದು ಆಶಿಸಿದಳು. ನಂತರ ಆ ಹೆಣ್ಣಾನೆಯು ನಿರಾಹಾರಿಯಾಗಿ ಸತ್ತಿತ್ತು. ಇದೆಲ್ಲವನ್ನೂ ನೆನಪಿಸಿಕೊಂಡ ಬೋಧಿಸತ್ವರಿಗೆ ಸ್ಪಷ್ಟವಾಗಿ ಇದು ಕಿರಿಯ ಪತ್ನಿಯ ಕೆಲಸವೆಂದು ಅರ್ಥವಾಗಿ ಓಹ್ ಬೇಟೆಗಾರನೇ, ಆಕೆಗೆ ದಂತಗಳು ಬೇಕಿಲ್ಲ. ನನ್ನ ವಧೆ ಮಾಡಲೆಂದೇ ಆಕೆ ನಿನಗೆ ಕಳುಹಿಸಿದ್ದಾಳೆ. ಆದರೂ ನಾನು ನಿನಗೆ ಸಾಯುವ ಮುನ್ನ ನನ್ನ ದಂತಗಳನ್ನು ದಾನವಾಗಿ ನೀಡಲು ಇಚ್ಛಿಸುತ್ತಿದ್ದೇನೆ ಕೊಯ್ದುಕೋ ಎಂದಿತು.
ಆದರೆ ಬಲಿಷ್ಠವಾದ ಆನೆಯ ದಂತ ಕೊಯ್ಯಲು ಆ ಬಲಿಷ್ಠ ಬೇಟೆಗಾರನ ಕೈಯಲ್ಲೂ ಆಗಲಿಲ್ಲ. ಆದರೆ ಆಗ ದಮಾಮಯಿಯಾದ ಆ ಛದ್ದಂತ ಆನೆಯೇ ಅದಕ್ಕೆ ಕೊಯ್ಯಲು ಸಹಾಯ ಮಾಡಿತು ತಾನು ನೋವಿನಿಂದ ನರಳುತ್ತಿದ್ದರೂ ಸಹಾ ತನ್ನ ಪ್ರಿಯವಾದ ಪ್ರಭಾವಳಿ ಬೀರುತ್ತಿದ್ದ ದಂತಗಳನ್ನು ಕತ್ತರಿಸಿ ನೀಡಿತು. ಹಾಗು ಆ ದಾನದ ಪ್ರತಿಫಲವಾಗಿ ಬುದ್ಧತ್ವ ಆಶಿಸಿತು. ನಂತರ ಹಾಗೆಯೇ ಆತನನ್ನು ಕಳುಹಿಸಿಕೊಟ್ಟು ಅದು ಮಡಿಯಿತು. ಆನಂತರ ಉಳಿದ ಆನೆಗಳು ಮತ್ತು ಪಚ್ಚೇಕ ಬುದ್ಧರೆಲ್ಲ ಅಲ್ಲಿಗೆ ಬಂದರು. ನಂತರ ಗೌರವ ಆದರಗಳಿಂದ ಅದಕ್ಕೆ ಶವಸಂಸ್ಕಾರ ಮಾಡಿದರು.
ಇತ್ತ ಬೇಟೆಗಾರನು ಆ ದಂತಗಳನ್ನು ಕಾಶಿ ರಾಣಿಗೆ ನೀಡಿದನು. ಆ ದಂತಗಳನ್ನು ನೋಡುತ್ತಲೇ ಆಕೆಗೆ ತನ್ನ ಪೂರ್ವ ಜನ್ಮದ ಪೂರ್ಣ ವಿವರಗಳು ಜ್ಞಾಪಕಕ್ಕೆ ಬಂದವು. ಆಗ ಆಕೆಗೆ ಬೋಧಿಸತ್ವರ ಮಹಾಸದ್ಗುಣಗಳು, ಅದರ ಪ್ರೇಮ ಎಲ್ಲವೂ ನೆನಪಿಗೆ ಬಂದಿತು. ತನ್ನ ಮೂರ್ಖತ್ವವೂ ಆಕೆಯ ಅರಿವಿಗೆ ಬಂದು ಇಂತಹ ಪುಣ್ಯಶಾಲಿ ಶ್ರೇಷ್ಠ ಆನೆಯನ್ನು ಕೊಲ್ಲಿಸಿದೆನಲ್ಲಾ ಎಂದು ಅಪಾರ ದುಃಖದಿಂದ ಎದೆಬಡಿದು ಅದೇದಿನ ಸತ್ತಳು.

No comments:

Post a Comment

ಸಸ ಬೋಧಿಸತ್ವರ ಮಹತ್ತರ ದಾನ

ಸಸ ಬೋಧಿಸತ್ವರ ಮಹತ್ತರ ದಾನ ಬೋಧಿಸತ್ವರು ತಮ್ಮ ದಾನಗುಣವನ್ನು ಸರ್ವಜನ್ಮಗಳಲ್ಲಿಯೂ ಪಾಲಿಸಿದರು. ಅವರು ಪ್ರಾಣಿಯಾಗಿರುವಾಗಲೂ ಸಹಾ ಇದನ್ನು ಬಿಡಲಿಲ್ಲ, ಪಾಲಿಸಿದರು....